ಸನಾತನ ಧರ್ಮದ ಚರ್ಚೆ ಜೋರಾಗುತ್ತಿದ್ದಂತೆ ಎಕ್ಸ್ ಜಾಲತಾಣದಲ್ಲಿ ಅಪ್ಲೋಡ್ ಆಗಿದ್ದ ಹಳೆಯ ಪೋಸ್ಟ್ ಒಂದು ಮತ್ತೊಮ್ಮೆ ವೈರಲ್ ಆಗಿ ಮುನ್ನಲೆಗೆ ಬಂದಿದೆ. ವರ್ಷದ ಹಿಂದೆ ಬೆಂಗಳೂರಿನ ದಯಾನಂದ ಎನ್ನುವ ವ್ಯಕ್ತಿಯೊಬ್ಬರು ತಮ್ಮ ಮನೆಯನ್ನು ಬಾಡಿಗೆಗೆ ಇದೆ ಎಂದು ಹಾಕುವ ಫಲಕದಲ್ಲಿ ಅನಿವಾರ್ಯ ಎನಿಸಿದಾಗ ದೇಹದ ಅಂಗಾಂಗಗಳನ್ನು ಮಾರಿಕೊಂಡು ಜೀವನ ನಡೆಸಬಹುದು.
ಮುಸ್ಲಿಮರ ಬಾಡಿಗೆ ದುಡ್ಡಿನಿಂರಲ್ಲ ಎಂದು ಆ ಬೋರ್ಡ್ ನಲ್ಲಿ ಬರೆದು ಹೆಸರು ಹಾಗೂ ನಂಬರ್ ಸಹ ಹಾಕಿ ಮನೆ ಮುಂದೆ ತೂಗಿ ಹಾಕಿದ್ದರು. ಇದನ್ನು ಗಮನಿಸಿದ ವ್ಯಕ್ತಿಯೊಬ್ಬರು ಅದರ ಫೋಟೋ ತೆಗೆದುಕೊಂಡು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಹೇಟ್ ವಾಚ್ ಕರ್ನಾಟಕ ಟ್ವಿಟರ್ ಅಕೌಂಟ್ ಕೂಡ ಈ ಫೋಟೋವನ್ನು ಪೋಸ್ಟ್ ಮಾಡಿತ್ತು.
ಇದನ್ನು ಈಗ ಅಶೋಕ್ ಸ್ವೇನ್ ಎನ್ನುವ ಖಾತೆದಾರರು ರೀಟ್ವೀಟ್ ಮಾಡಿದ್ದಾರೆ. ಬೆಂಗಳೂರು ಸೋ ಕಾಲ್ಡ್ ಸಿಲಿಕಾನ್ ಸಿಟಿ ಎಂದು ಇದಕ್ಕೆ ಸರ್ಖಾಸ್ಟಿಕ್ ಅಡಿಬರಹ ಕೂಡ ಬರೆದಿದ್ದಾರೆ. ಸದ್ಯಕ್ಕೆ ರಾಜ್ಯ ಹಾಗೂ ದೇಶದಲ್ಲಿ ಧರ್ಮದ ಬಗ್ಗೆ ಉಂಟಾಗುತ್ತಿರುವ ಚರ್ಚೆಯನ್ನೂ ಸಹ ಗಮನಿಸಿ ಭಾರತದಂತಹ ದೇಶದಲ್ಲಿ ಪರ ಧರ್ಮವನ್ನು ಇಷ್ಟೊಂದು ದ್ವೇಷಿಸುವ ಮನೋಭಾವ ಮೊದಲಿನಿಂದಲೂ ಇತ್ತೋ ಅಥವಾ ಈಗ ಇದು ಹೆಚ್ಚಾಗುತ್ತಿದೆಯೇ ಎನ್ನುವ ಚರ್ಚೆಯನ್ನುಂಟು ಮಾಡಿದೆ.
ಅದರಲ್ಲೂ ಕರ್ನಾಟಕದಲ್ಲಿ ಬಸವಣ್ಣನಂತಹ ಜಾತ್ಯತೀತ ಮನೋಭಾವದ ಮಹನೀಯರು ಜನಿಸಿದ ನಾಡಿನಲ್ಲಿ ಇನ್ನು ಸಹ ಧರ್ಮಗಳ ಆಧಾರದ ಮೇಲೆ ಮನೆ ಬಾಡಿಗೆ ಕೊಡುವ ವಿಚಾರ ಚರ್ಚೆಯಾಗುತ್ತಿದೆ ಎಂದರೆ ಮತ್ತೊಮ್ಮೆ ನಾವು ಇನ್ನು ಎಲ್ಲಿದ್ದೇವೆ ಎಂದು ಅನುಮಾನ ಉಂಟಾಗುತ್ತದೆ.
ನಿಜಕ್ಕೂ ಈ ರೀತಿಯ ಫಲಕ ಹಾಕಿರುವ ವ್ಯಕ್ತಿಯ ಮನಸ್ಥಿತಿ ಹೀಗಿದೆಯೋ ಅಥವಾ ಈ ವ್ಯಕ್ತಿಗೆ ಈ ರೀತಿ ಹಾಕಲು ಮತ್ತಿನ್ನೇನಾದರೂ ಕಾರಣ ಇದೆಯೋ ಗೊತ್ತಿಲ್ಲ. ಆದರೆ ರಾಜಾರೋಷವಾಗಿ ಆ ವ್ಯಕ್ತಿ ಈ ರೀತಿ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುವುದಕ್ಕೆ ಚರ್ಚೆ ಜೋರಾಗಿ ನಡೆದಿದೆ. ಸದ್ಯಕ್ಕೆ ಈ ಪೋಸ್ಟ್ ಗಳಿಗೆ ಬಂದಿರುವ ಕಾಮೆಂಟ್ಗಳನ್ನು ಗಮನಿಸುವುದಾದರೆ ಹೆಚ್ಚಿನ ಜನರು ಈ ವ್ಯಕ್ತಿಯ ನಿಲುವನ್ನು ವಿರೋಧಿಸಿದ್ದಾರೆ.
ಹೈಲೈಟ್ ಆಗಿರುವ ಕೆಲ ಕಮೆಂಟ್ ನ್ನು ಈ ಅಂಕಣದಲ್ಲಿ ಹಂಚಿಕೊಳ್ಳುತ್ತಿದ್ದೇನೆ. ದೇವರು ಅವರ ಕೋರಿಕೆ ಒಪ್ಪಿಕೊಳ್ಳಲಿ ಎಂದು ಪರೋಕ್ಷವಾಗಿ ಅಂಗಾಂಗ ಮಾರಿಕೊಳ್ಳುವಂತಾಗಲಿ ಎಂದೊಬ್ಬರು ಹಾರೈಸಿದ್ದಾರೆ. ರಾಜನ್ ಎನ್ನುವವರು ಎಂಥಹ ಬುದ್ಧಿವಂತ ಮನುಷ್ಯ, ಒಂದು ವೇಳೆ ಈ ಮನುಷ್ಯನ ಆರೋಗ್ಯ ಹಾಳಾದರೆ ವೈದ್ಯರು ಇವನಿಗೆ ಕೊಡುವ ರಕ್ತ ಮತ್ತು ಅಂಗಾಂಗಳು ಸಂಪೂರ್ಣ ಹಿಂದೂ ಧರ್ಮಕ್ಕೆ ಸೇರಿದವನದ್ದೇ ಆಗಿವೆ ಎಂದು ಖಾತ್ರಿಪಡಿಸಿಕೊಳ್ಳುತ್ತಾರೆ ಎಂದು ವ್ಯಂಗ್ಯ ಮಾಡಿದ್ದಾರೆ.
ನಿಮ್ಮ ಅಂಗಾಂಗ ಮಾರಿಕೊಳ್ಳುವ ಪರಿಸ್ಥಿತಿ ಎಂದಿಗೂ ಬರದಿರಲಿ ಎಂದು ಸೈಯದ್ ನೈಮತ್ ಉಲ್ಲಾ ಫಯಾಜ್ ಎನ್ನುವವರು ಹರಸಿದ್ದಾರೆ. ನಿಮಗೆ ಇಷ್ಟವಾಗುವಂಥ ಬಾಡಿಗೆದಾರರೇ ನಿಮಗೆ ಸಿಗಲಿ. ಅಂಗಾಂಗ ಮಾರಿಕೊಳ್ಳುವ ಪರಿಸ್ಥಿತಿ ನಿಮಗೆ ಬರುವುದು ಬೇಡ. ಮಾನಸಿಕವಾಗಿ ಬೇಗ ಹುಷಾರಾಗಿ ಎಂದು ಹಾರೈಸಿದ್ದಾರೆ. ಎಂಥ ಕಾಲ ಬಂತು, ಹಿಂದೂಗಳಲ್ಲಿ ಈ ಮಟ್ಟದ ದ್ವೇಷ ತುಂಬಿಕೊಳ್ಳುತ್ತದೆ ಎಂದು ಊಹಿಸಲೂ ಆಗುತ್ತಿಲ್ಲ ಎಂದು ರಮೇಶ್ ಎನ್ನುವವರು ಪ್ರತಿಕ್ರಿಯಿಸಿದ್ದಾರೆ.
ಮೊದಲಿನಿಂದಲೂ ಇಂತಹ ಮನೋಭಾವ ಇತ್ತು ಆದರೆ ಅದನ್ನು ಯಾರೂ ಹೀಗೆ ತೋರಿಸುತ್ತಿರಲಿಲ್ಲ. BJP ಬಂದ ಮೇಲೆ ಪರಿಸ್ಥಿತಿ ಬದಲಾಗಿದೆ ಎಂದು ಹರ್ಷ ಎನ್ನುವ ಬಳಕೆದಾರರು ಅಭಿಪ್ರಾಯ ಪಟ್ಟಿದ್ದಾರೆ. ಪ್ರದೀಪ್ ಎನ್ನುವವರು ಇದಕ್ಕೆ ಹೂಂಗುಟ್ಟಿದ್ದಾರೆ. ಅಂಗಾಂಗ ಮಾರುತ್ತೇನೆ ಎನ್ನುವ ಬರಹಕ್ಕೂ ಅನೇಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಂಗಾಂಗಗಳನ್ನು ಮಾರಿಕೊಳ್ಳಬಾರದು, ದಾನ ಕೊಡಬೇಕು. ಎಂದು ಮಹಿಳೆಯೊಬ್ಬರು ಬುದ್ಧಿ ಹೇಳಿದ್ದಾರೆ.